ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ - ರೈತರ ಮೊಗದಲ್ಲಿ ಹರ್ಷ
ಯಡಿಯೂರಪ್ಪ ಸರ್ಕಾರದ ರೈತಪರ ಕಾಳಜಿಯಿಂದ ಎರಡನೇ ವರ್ಷವೂ ಎರಡು ಬೆಳೆಗಳಿಗೆ ನೀರು: ಅಮರೇಶ ಕರಡಿ
ಹೊಸಶಕೆ ನ್ಯೂಸ್-ಕೊಪ್ಪಳ :ಕೊಪ್ಪಳ, ರಾಯಚೂರು, ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಶಾಸಕ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಹಾಗೂ ಸಂಸದ ಸಂಗಣ್ಣ ಕರಡಿ ಅವರು ಪುತ್ರ, ಕೆಡಿಪಿ ಸದಸ್ಯ ಅಮರೇಶ ಕರಡಿ, ಕಾಡಾ ಅಧ್ಯಕ್ಷ ತಿಪ್ಪೆರುದ್ರಯ್ಯಸ್ವಾಮಿ ಅವರು ನೀರು ಬಿಡುಗಡೆ ಮಾಡಿದರು.
ಭಾನುವಾರ ಮುನಿರಾಬಾದ್ ನ ತುಂಗಭದ್ರಾ ಜಲಾಶಯಕ್ಕೆ ರೈತರು, ಗಣ್ಯರೊಂದಿಗೆ ಪೂಜೆ ಸಲ್ಲಿಸಲಾಯಿತು. ತುಂಗಭದ್ರಾ ಜಲಾಶಯ 115ನೇ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜು. 18 ರಿಂದ ವಿವಿಧ ಕಾಲುವೆಗಳಿಗೆ ನ. 30 ರವರೆಗೆ ಜಲಾಶಯದಿಂದ ನೀರು ಹರಿಸುವದಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಬಳಿಕ ಮಾತನಾಡಿದ ಕೆಡಿಪಿ ಸದಸ್ಯ ಅಮರೇಶ ಕರಡಿ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಜಲಾಶಯದಿಂದ ಎರಡನೇ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ, ತುಂಗಭದ್ರಾ ಜಲಾಶಯವು ತ್ರೀವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ, ಬಿಜೆಪಿ ಸರ್ಕಾರ ರೈತರ ಪರವಾಗಿರುವದರಿಂದ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸುವ ದೃಢನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ರೈತರ ಹಿತದೃಷ್ಠಿಯಿಂದ ಸರ್ಕಾರ ಕಾಲುವೆಗಳಿಗೆ ನೀರು ಹರಿಸುತ್ತಿದ್ದು, ಜಲಾಶಯದ ವಿವಿಧ ಕಾಲುವೆಗಳಿಂದ ಹರಿವು ನೀರಿನ ಸದುಪಯೋಗವಾಗಬೇಕು, ನಮ್ಮ ಪ್ರದೇಶ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಬೇಕು ಅದಕ್ಕೆ ಅನುಷ್ಠಾನದಲ್ಲಿರುವ ವಿವಿಧ ನೀರಾವರಿ ಯೋಜನೆಗಳಿಗೆ ಸರ್ಕಾರ ಚಾಲನೆ ನೀಡಿದೆ ಎಂದರು.
ದೇವರ ಕೃಪೆಯಿಂದ ಮಳೆಯು ಚೆನ್ನಾಗಿ ಬರುತ್ತಿದ್ದು, ಜಲಾಶಯದ ಅಚ್ಚುಕಟ್ಟು ಪ್ರದೇಶದ
ಎಲ್ಲ ರೈತರಿಗೂ ಅದರಲ್ಲಿಯೂ ಕೆಳಭಾಗದ ರೈತರಿಗೆ ನೀರು ತಲುಪಬೇಕು, ಐಸಿಸಿಐ ಸಭೆಯ ತೀರ್ಮಾನದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು
ಅಗತ್ಯ ಕ್ರಮಗಳನ್ನು ತೆಗೆದುಕೊಂಡು ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮುಖ್ಯವಾಗಿರುತ್ತದೆ : ಅಮರೇಶ ಕರಡಿ, ಕೆಡಿಪಿ ಸದಸ್ಯರು,
ಕೊಪ್ಪಳ
=================================
ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಎಡದಂಡೆ ಮುಖ್ಯ ಕಾಲುವೆಗೆ ಜು. 18 ರಿಂದ 4100 ಕ್ಯೂಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1130 ಕ್ಯೂ., ಬಲದಂಡೆ ಕೆಳಮಟ್ಟದ ಕಾಲುವೆಗೆ 700 ಕ್ಯೂ. ನಂತೆ ನವೆಂಬರ್ 30 ರವರೆಗೆ, ರಾಯ ಬಸವ ಕಾಲುವೆಗೆ ಜೂನ್ 1ರಿಂದ ಡಿಸೆಂಬರ್ 10 ರವರೆಗೆ 235 ಕ್ಯೂ., ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 18 ರಿಂದ 25 ಕ್ಯೂ.ನಂತೆ ನವೆಂಬರ್ 30 ರವರೆಗೆ ನೀರು ಹರಿಸಲಾಗುತ್ತದೆ
==============================